ನಾನು ಕವಿಯಲ್ಲ…
ಬರಹಗಾರರ ಬಳಗ
ಜುಲೈ ೧೭, ೨೦೨೫
೭ ವೀಕ್ಷಣೆಗಳು
ನಾನು ಕವಿಯಲ್ಲ!!...
ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ
ಸಂತ್ರಸ್ತ ಮನಸುಗಳ ಸಂತೈಸಲಿಲ್ಲ
ಆಕ್ರೋಶದ ಧ್ವನಿಗಳಿಗೆ
ಗಂಟಲು ಗೂಡಿಸಲಿಲ್ಲ
ನಾನೇನೂ ಮಾಡಿಲ್ಲ
ನಾನು ಕವಿಯಲ್ಲ!..
ಸರ್ಕಾರ ಸರ್ವಾಧಿಕಾರವಾದಾಗ
ತೆಪ್ಪಗೆ ಬಾಯಿಮುಚ್ಚಿಕೊಂಡಿದ್ದವನಿಗೆ
ಜನ ಜೀವನ ಶೈಲಿಯಲ್ಲಿ
ಕ್ರಾಂತಿ ತರಲಾಗಲಿಲ್ಲ..
ಧ್ವನಿಯೆತ್ತಿ ಪ್ರಶ್ನಿಸುವ
ಗುಂಡಿಗೆಯೇ ಇಲ್ಲದವನಿಗೆ
ನಿಷ್ಠುರವಾಗಿ ಮಾತನಾಡಿ
ವ್ಯವಸ್ಥೆಯನು ಎಚ್ಚರಿಸಲಾಗಲಿಲ್ಲ..
ಕ್ರೌರ್ಯದಾ ಕೋಟೆಯನು
ಬೇಧಿಸಲಾಗದವನಿಗೆ
ಎದೆಕೊಟ್ಟು ನಿಲ್ಲಲು
ಧೈರ್ಯ ಸಾಕಾಗಲಿಲ್ಲ..
ಸುಳ್ಳಿನ ಸಾಗರವನ್ನು
ಎದುರಿಸಲಾಗದವನಿಗೆ
ಸತ್ಯವನು ಬರೆಯಲು
ಕೈ ಬರಲೇ ಇಲ್ಲ..
ಏನೂ ಮಾಡಲಾಗದ ನಾನು
ಹೇಗೆ ಹೇಳಲಿ ಕವಿಯೆಂದು?
ಆಗಲೇ ಹೇಳಿದೆನಲ್ಲ..
ನಾನು ಕವಿಯಲ್ಲ…
-ಸನಂ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜುಲೈ ೧೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬