ಕರ್ನಾಟಕ ನಾಮಕರಣದ ದಿನ
ಬರಹಗಾರರ ಬಳಗ
ಅಕ್ಟೋಬರ್ ೩೧, ೨೦೨೫
೯ ವೀಕ್ಷಣೆಗಳು
ಕನ್ನಡ ಎಂದರೆ ಹೊನ್ನಿನ ನುಡಿಯು
ಮಣ್ಣಿನ ಕಣಕಣವು/
ಅನ್ನದ ಋಣವನು ತೀರಿಸು ಮಗುವೆ
ಚಿನ್ನದ ಗುಣವದುವು//
ಕನ್ನಡ ನೆಲಜಲ ಮರೆಯದಿರು
ಮುನ್ನುಡಿ ಬರೆಯುತಲಿ/
ಕನ್ನಡ ಗಾಳಿಯ ಉಸಿರಾಡುತಲಿ
ನಿನ್ನೆಯ ನೆನಪಿರಲಿ//
ಅಆಇಈ ಅಕ್ಷರ ಮಾಲೆ
ಹೊಳೆಯುವ ಮುತ್ತುಮಣಿ/
ಏರಿಸಿ ಹಾರಿಸಿ ಕನ್ನಡ ಧ್ವಜವನು
ಗೌರವ ಸಲಿಸುತಲಿ//
ನಾಡಗೀತೆಯ ಹಾಡುತ ಮುದದಿ
ತಾಯಿಗೆ ವಂದನೆ ಮಾಡುತಲಿ/
ಭೇದಭಾವ ನಮ್ಮಲಿ ಬೇಡ
ಮನುಜರೆಲ್ಲ ಒಂದೇ//
ಕನ್ನಡ ಭಾಷೆ ತಾಯಿ ಭಾಷೆ
ಕೂಗಿ ಹೇಳುತಲಿ/
ಅನ್ಯ ಭಾಷೆ ದ್ವೇಷಿಸ ಬೇಡ
ವ್ಯವಹಾರಕೆ ಇರಲಿ//
ಕರ್ನಾಟಕ ನಾಮಕರಣದ ದಿನವು
ಭಾಷಾ ವೈಭವವು/
ಸಂಭ್ರಮ ಸಡಗರ ಸಂಸ್ಕೃತಿ ಮೆರುಗಲಿ
ಬೆರೆಯುತ ನಲಿಯುತಲಿ//
ಹಿರಿಯ ಹೋರಾಟಗಾರರ ನೆನಪಿಸುತಲಿ
ಬಾಳಿಗೆ ನಾಂದಿಯ ಹಾಡುತಲಿ/
ಗಂಧದ ಚಂದದ ಬೀಡೆನುತಲಿ
ಕನ್ನಡಮ್ಮನ ಸೇವೆಯ ಮಾಡುತಲಿ//
ಅಮ್ಮನ ಮಮತೆಯ ಮಡಿಲಿನ ಕುಡಿಗಳು
ಅರಳುವ ಪುಷ್ಪಗಳು/
ಹೇಳುತ ಜೈ ಭುವನೇಶ್ವರಿ ಮಾತೆ
ಜೇನಿನ ಸವಿಯ ಬೆರೆಸುತಲಿ//
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬