ಹಚ್ಚೇವು ಕನ್ನಡದ ದೀಪ ಬೆಳಗಿಸಿದಿರಿ ಬೆಳಗಾವಿಯ ರಾಮದುರ್ಗದಲಿ ಜನಿಸಿದಿರಿ ಕನ್ನಡದ ಕಟ್ಟಾಭಿಮಾನಿಯಾಗಿ ಮೆರೆದಿರಿ ಭಾಷಾಭಿಮಾನದಲಿ ತಮಗೆ ತಾವೇ ಸಾಟಿಯಾದಿರಿ   ಆಳವಾದ ಅಧ್ಯಯನ ನರನಾಡಿಯಲಿತ್ತು ವಾಮನನಾದರೂ ತ್ರಿವಿಕ್ರಮನ ಸಾಧನೆಯಾಗಿತ್ತು ಗೀತ-ಗೌರವಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಒಲಿದಿತ್ತು ಬಾಳಿನೊಳು ಹದವರಿತು ಹಿತಮಿತ ಹರಿದಾಡಿತು   ಗಾಂಧೀಜಿಯವರ ಆದರ್ಶಗಳ ಗೌರವಿಸಿದಿರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದಿರಿ ಕನ್ನಡಿಗರ ಹೃದಯದಲಿ ಚಿರಸ್ಥಾಯಿಯಾದಿರಿ ನವೋದಯ ಕಾಲದ ನವ್ಯ ಕವಿಕುಸುಮವಾದಿರಿ   ಛಂದೋವಿಕಾಸ ಮಹಾ ಪ್ರಬಂಧ ಬರೆದ ಮಹನೀಯರು ಬರವಣಿಗೆಗೆ ತಕ್ಕಂತೆ ಡಾಕ್ಟರೇಟ್ ಪಡೆದಿರಿ ಸಾರಸ್ವತ ಲೋಕಕ್ಕೆ ವೈವಿಧ್ಯ ಕೃತಿಗಳ ನೀಡಿದಿರಿ ಅಧ್ಯಯನಶೀಲ ಸುಶೀಲ ಸಂಭಾವಿತ ಮೇಧಾವಿ ಎನಿಸಿದಿರಿ   ಕಾವ್ಯ ಪ್ರಬಂಧ ಸಂಶೋಧನೆ ತಮ್ಮ ಜೀವಾಳವೆಂದಿರಿ ನಕ್ಷತ್ರಗಾನ ಭಾವತೀರ್ಥ ಕರಿಕೆ ಕಣಗಿಲು  ನಮನ ಬರೆದಿರಿ ಬಣ್ಣದ ಚೆಂಡು ತನನ ತನನತೊಂ ಶಿಶುಗೀತೆ ರಚಿಸಿ ರಂಜಿಸಿದಿರಿ ಅಪಾರ ಪಾಂಡಿತ್ಯದ ಪ್ರತಿಬಿಂಬವಾಗಿ ಕಿರಿಯರಿಗೆ ಕನ್ನಡಿಯಾದಿರಿ   ನಮಿಸುವೆ ನೆನೆಯುವೆ ಹಿರಿಯ ಮಹನೀಯರನಿಂದು ಕಿರಿಯರಿಗೆ ಮಾರ್ಗದರ್ಶಕರಾಗಿ ಬೆಳೆಸಿ ಬೆಳಗಿದಿರೆಂದೆಂದು ಸದಾಚಾರದ ತಮ್ಮ ವ್ಯಕ್ತಿತ್ವ ಮಾದರಿಯಾಗಿಹುದಿಂದು ಒಂದೆರಡು ನುಡಿಗಳಲಿ ತಮಗೆ ಕೃತಜ್ಞತೆ ಸಲಿಸುವೆನಿಂದು -ರತ್ನಾ ಕೆ ಭಟ್, ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ