ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಹೌದಲ್ವಾ? ಕನ್ನಡಮ್ಮನ ನೆಲಜಲದ ಮುದ್ದು ಮಕ್ಕಳೆಲ್ಲ ಒಂದಾಗಿ ಸೇರಿ, ನಾಡು ನುಡಿಯ ಬಗ್ಗೆ ಪ್ರೀತಿ, ಅಭಿಮಾನದಲಿ ವ್ಯವಹರಿಸಿದರೆ "ಕನ್ನಡ ಕಲಿಯಿರಿ, ಭಾಷೆಯನ್ನು ಬೆಳೆಸಿರಿ, ಬೆಳಗಿರಿ "ಹೇಳುವ ಅಗತ್ಯವೇ ಇಲ್ಲ ಅಲ್ಲವೇ? ಕಲಿಯೋಣ ಮಕ್ಕಳೇ. ಹಿರಿಯರಿಂದ, ಅಧ್ಯಾಪಕರಿಂದ, ನೆರೆಹೊರೆಯ ಬಂಧು ಬಳಗದವರಿಂದಲೂ ಕಲಿಯಬೇಕು. ಪುಸ್ತಕಗಳನ್ನು ಓದಿ-ಬರೆಯುವುದರ ಮೂಲಕ ನೋಡಿ, ಅರ್ಥ ಮಾಡಿಕೊಂಡು ಕಲಿಯಬೇಕು. ನಮ್ಮ ಬದುಕಿನ ಹಾದಿಯನ್ನು ನಾವೇ ಹುಡುಕಬೇಕು. ಅದೇ ಕನ್ನಡ ತಾಯಿಗೆ, ಕನ್ನಡ ಭಾಷೆಗೆ ಮಾಡುವ ಸೇವೆ. ಭಾಷಾಭಿಮಾನ ಅಂತರಂಗದಿಂದ ಉದಿಸಬೇಕು. ಯಾರದ್ದೋ ಒತ್ತಾಯಕ್ಕೆ ಸಲ್ಲದು. ಸಣ್ಣ ಸಣ್ಣ ಕಥೆ ಪುಸ್ತಕಗಳನ್ನು (ಭಕ್ತ ಧ್ರುವ, ಜೀಮೂತವಾಹನ, ಶಿವಭಕ್ತ ಮಾರ್ಕಾಂಡೇಯ, ಪಂಚತಂತ್ರದ ಕಥೆಗಳು, ಪ್ರಹ್ಲಾದ ಚರಿತ್ರೆ, ಸತ್ಯವಾನ್ ಸಾವಿತ್ರಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು, ಕನ್ನಡದ ಹಿರಿಯ ಸಾಹಿತಿಗಳು) ಬಿಡುವಿನ ಸಮಯದಲ್ಲಿ ಓದುವ ಅಭ್ಯಾಸದಿಂದ ಜ್ಞಾನವೂ ಬೆಳೆಯುವುದು. ಮೌಲ್ಯಗಳ ಬಗ್ಗೆ ತಿಳಿಯಬಹುದು. ಅರಿಯೋಣ-ತಿಳಿಯೋಣ-ಒಂದಾಗಿ ಕಲಿತು-ಕಲಿಸೋಣ. (ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ