ಲಿಂಬೆ ಬೇಸಾಯದಲ್ಲಿ ಸಸ್ಯ ಸಂರಕ್ಷಣೆ
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೨೧, ೨೦೨೬
೧೦ ವೀಕ್ಷಣೆಗಳು
ಲಿಂಬೆ ಹಣ್ಣು ಅಥವಾ ಕಾಯಿಗೆ ವರ್ಷವಿಡೀ ಬೇಡಿಕೆಯಿರುತ್ತದೆ. ಮಳೆಗಾಲದಲ್ಲಿ ಒಂದಿಷ್ಟು ಬೇಡಿಕೆ ಕಡಿಮೆ ಎಂದು ಅನಿಸಿದರೂ ಉತ್ತಮ ಮಾರುಕಟ್ಟೆ ಇದೆ. ಸ್ವಲ್ಪ ದರ ಕಡಿಮೆ ಇರುವಾಗ ಉಪ್ಪಿನಕಾಯಿ, ಸ್ಕ್ವಾಷ್ ಮೊದಲಾದುವುಗಳನ್ನು ತಯಾರಿಸಬಹುದು. ಇವು ಬಹುಕಾಲ ಕೆಡದೇ ಉಳಿಯುತ್ತವೆ. ಲಿಂಬೆ ಸಸ್ಯದ ಬೆಳವಣಿಗೆಯ ಸಮಯದಲ್ಲಿ ಕೃಷಿಕರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕೀಟಗಳು
ಲಿಂಬೆ ಪತಂಗ : ಲಿಂಬೆ ಪತಂಗದ ಮರಿಹುಳುಗಳು ಎಲೆಗಳ ಮೇಲೆ ಪಕ್ಷಿ ವಿಸರ್ಜಿಸಿದ ಮಲದಂತೆ ಕಾಣಿಸುತ್ತವೆ. ಮರಿಹುಳುಗಳು ಎಲೆಗಳನ್ನು ತಿಂದು ಹಾಳುಮಾಡುತ್ತವೆ.
ನಿರ್ವಹಣೆ : ಗಿಡದಲ್ಲಿ ಹೊಸ ಎಲೆಗಳು ಬಂದಾಗ ೪ ಗ್ರಾಂ. ಕಾರ್ಬರಿಲ್ ೫೦ ಡಬ್ಲ್ಯೂ ಪಿ. ಅಥವಾ ೧ ಮಿ.ಲೀ. ಬಿ.ಟಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಈ ಕೀಟ ಬಾಧೆಯನ್ನು ತಡೆಗಟ್ಟಬಹುದು.
ಎಲೆಸುರಂಗ ಹುಳು : ಮರಿಹುಳುಗಳು ಎಲೆಗಳೊಳಗೆ ಕೆರೆದು ತಿನ್ನುವುದರಿಂದ ಎಲೆಗಳ ಮೇಲೆ ಬಿಳಿ ಹೂವಿನ ಆಕೃತಿಯ ಪಟ್ಟಿಗಳನ್ನುಂಟು ಮಾಡುತ್ತವೆ. ನಂತರ ಎಲೆಗಳು ಬಾಡಿ ಬೇಗ ಉದುರುತ್ತವೆ
ನಿರ್ವಹಣೆ : ಶೇ. ೫೦ ಬೇವಿನ ಬೀಜದ ಕಷಾಯ ಅಥವಾ ೦.೫ಮಿ.ಲೀ. ಸೈಫರ್ಮೆಥಿನ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎಲೆ ತಿನ್ನುವ ಕೀಟ : ಮರಿಹುಳುಗಳು ಎಲೆಗಳನ್ನು ತಿಂದು ಹಾಳುಮಾಡುತ್ತವೆ. ಮೇಲಿನಂತೆ ನಿರ್ವಹಣೆ ಮಾಡಬೇಕು.
ಸಸ್ಯ ಹೇನು : ಕಪ್ಪು ಬಣ್ಣದ ಹೇನುಗಳು ಗುಂಪಿನಲ್ಲಿದ್ದು ಎಳೆಯದಾದ ರೆಂಬೆಗಳಿಂದ ರಸ ಹೀರುತ್ತವೆ. ಇಂತಹ ರೆಂಬೆಗಳು ಹಳದಿಯಾಗುತ್ತವೆ.
ನಿರ್ವಹಣೆ : ಪ್ರತಿ ಲೀಟರ್ ನೀರಿಗೆ ೧.೭೦ಮಿ.ಲೀ. ಡೈಮಿಥೋಯೆಟ್ ೩೦ ಉಇ.ಸಿ. ಅಥವಾ ೦.೨೫ ಇಮಿಡಾಕ್ಲೋಪ್ರಿಡ್ ಬೆರೆಸಿ ಸಿಂಪಡಿಸಬೇಕು.
ಗೊಣ್ಣೆ ಹುಳು : ಬಿಳಿ ಇಂಗ್ಲಿಷ್ `ಸಿ’ ಆಕಾರದ ಮರಿಹುಳುಗಳು ಬೇರುಗಳನ್ನು ತಿನ್ನುತ್ತವೆ. ಮರಗಳ ಎಲೆಗಳು ಮೊದಲು ಹಳದಿಯಾಗುತ್ತದೆ. ನಂತರ ಮರಗಳು ಒಣಗುತ್ತವೆ.
ನಿರ್ವಹಣೆ : ೧) ಮುಂಗಾರು ಹಂಗಾಮಿನ ಮೊದಲ ಮಳೆ ಬಿದ್ದ ಕೂಡಲೇ ಆ ದಿನ ರಾತ್ರಿ ೭-೩೦ ೮-೩೦ರ ವರೆಗೆ ದುಂಬಿಗಳನ್ನು ದೀಪದ ಬಲೆಗಳಿಗೆ ಆಕರ್ಷಿಸಿ ನಾಶಪಡಿಸಬೇಕು. ೨) ಮುಂಗಾರು ಹಂಗಾಮಿನ ಮೊದಲ ಮಳೆ ಬಿದ್ದ ದಿನವೇ ಸಾಯಂಕಾಲ ಬೇವು, ಪೇರಳೆ ಮುಂತಾದ ಗಿಡಗಳ ಟೊಂಗೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ಬದುಗಳ ಮೇಲೆ ನೆಡುವುದರಿಂದ ದುಂಬಿಗಳು ಆಕರ್ಷಿಸಲ್ಪಟ್ಟು ಸಾಯುತ್ತವೆ. ೩) ಗಿಡದ ಬುಡಕ್ಕೆ ಮಣ್ಣಿನಲ್ಲಿ ೧೦ ಮಿ.ಲೀ. ಕ್ಲೋರೋಪೈರಿಫಾಸ್ ೨೦ ಇ.ಸಿ. ಪ್ರತಿ ಲೀ. ನೀರಿಗೆ ಬೆರೆಸಿ ಸುರಿಯಬೇಕು. ೪) ಕೀಟಗಳಲ್ಲಿ ರೋಗ ತರಿಸುವ ಶಿಲೀಂಧ್ರಗಳನ್ನು ಮಣ್ಣಿಗೆ ಬೆರೆಸುವುದರಿಂದ ಕೂಡ ಗೊಣ್ಣೆ ಹುಳುಗಳನ್ನು ನಿರ್ವಹಿಸಬಹುದು.
ಹಿಟ್ಟು ತಿಗಣೆ, ಬಿಳಿನೊಣ, ಶಲ್ಕಕೀಟ : ಈ ಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಎಲೆಗಳು ಹಳದಿಯಾಗಿ ಹೂ ಕಾಯಿಗಳು ಉದುರುತ್ತವೆ.
ನಿರ್ವಹಣೆ : ಮೀನು ಎಣ್ಣೆ ಸಾಬೂನಿನ ಜೊತೆಗೆ ೪ ಗ್ರಾಂ. ಕಾರ್ಬರಿಲ್ ಶೇ. ೫೦ ಡಬ್ಲ್ಯೂ ಪಿ. ಅಥವಾ ೨.೦ ಮಿ.ಲೀ. ಕ್ವಿನಾಲ್ಫಾಸ್ ೨೫ ಇಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿರಿ. ಹತ್ತು ದಿನಗಳ ನಂತರ ಇದೇ ಸಿಂಪರಣೆಯನ್ನು ಪರಿವರ್ತಿಸಬೇಕು.
ಹಣ್ಣಿನ ಚಿಟ್ಟೆ : ಪತಂಗಗಳು ಹಣ್ಣಿನಿಂದ ರಸವನ್ನು ಹೀರುತ್ತವೆ. ಅಂತಹ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ನಂತರ ಹಣ್ಣುಗಳು ಕೊಳೆಯುತ್ತವೆ ಮತ್ತು ಕೆಳಗೆ ಬೀಳುತ್ತವೆ. ೪ ಗ್ರಾಂ. ಕಾರ್ಬಾರಿಲ್ ೫೦ ಡಬ್ಲ್ಯೂ ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಮರಿಗಳ ಆಹಾರ ಸಸ್ಯಗಳನ್ನು ನಿಯಂತ್ರಿಸಬೇಕು.
ಕಾಂಡ ಕೊರೆಯುವ ಹುಳು : ಕಾಂಡ ಕೊರಕ ಮರಿಗಳು, ರೆಂಬೆ ಮತ್ತು ಕಾಂಡಗಳನ್ನು ಕೊರೆದು ತಿನ್ನುತ್ತವೆ. ಅಂತಹ ರೆಂಬೆಗಳು ಮತ್ತು ಮರಗಳು ಒಣಗುತ್ತದೆ. ಕಾಂಡ ಕೊರೆಯುವ ಹುಳದ ಬಾಧೆಯನ್ನು ತಡೆಯಲು ಹುಳು ಕೊರೆದ ತೂತುಗಳಲ್ಲಿ ಡೈಕ್ಲೊರೋಫಾಸ್ ಹನಿ ಹಾಕಿ ಹಸಿ ಮಣ್ಣಿನಿಂದ ತೂತುಗಳನ್ನು ಮುಚ್ಚಬೇಕು.
ಜೇಡನುಸಿ : ನುಶಿಗಳು ಎಲೆಗಳ ಕೆಳಭಾಗದಿಂದ ರಸ ಹೀರುತ್ತವೆ. ಎಲೆಗಳ ಮೇಲೆ ಬಿಳಿ ಚುಕ್ಕೆಗಳನ್ನು ಕಾಣಬಹುದು. ನಿರ್ವಹಣೆ : ಪ್ರತಿ ಲೀಟರ್ ನೀರಿನಲ್ಲಿ ೨.೫ ಮಿ.ಲೀ. ಡಿಕೋಫಾಲ್ ೨೦ ಇ.ಸಿ. ಬೆರೆಸಿ ಸಿಂಪರಣೆ ಮಾಡಬೇಕು.
ರೋಗಗಳು
ಕಜ್ಜಿ ರೋಗ : ಎಲೆಗಳು ಹಾಗೂ ಹಣ್ಣುಗಳ ಮೇಲೆ ಕಜ್ಜಿ ತರಹದ ಚುಕ್ಕೆಗಳು ಕಂಡು ಬಂದು ಎಲೆ ಒಣಗಿ ಉದುರುತ್ತವೆ. ಹಾಗೂ ಹಣ್ಣುಗಳು ಕೊಳೆಯುತ್ತವೆ. ರೋಗ ತಗುಲಿನ ಭಾಗಗಳನ್ನು ಕತ್ತರಿಸಿದ ಮೇಲೆ ಪ್ರತಿ ಲೀಟರ್ ನೀರಿಗೆ ೩ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಶೇ. ೫೦ ಡಬ್ಲ್ಯೂ ಪಿ ಹಾಗೂ ೦.೫ ಗ್ರಾಂ. ಸ್ಟೆçಪ್ಟೋಮೈನ್ ಸಲ್ಪೇಟ್ ಅಥವಾ ಶೇ. ೧ರ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ ಮತ್ತೆ ಇದೇ ಸಿಂಪರಣೆಯನ್ನು ಪುನರಾವರ್ತಿಬೇಕು.
ಕಾಂಡ ಒಣಗುವ ರೋಗ : ರೆಂಬೆಗಳು ಒಣಗಿ ಗಿಡವೆಲ್ಲಾ ಸೊರಗುತ್ತದೆ. ಒಣಗಿದ ರೆಂಬೆಗಳನ್ನು ಕತ್ತರಿಸಿ ಗಿಡಗಳಿಗೆ ಶೇ. ೫೦ರ ೩ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಟ್ರಸ್ಟೇಜಾ ನಂಜು ರೋಗ : ಎಲೆಗಳು ಮುದುಡುತ್ತವೆ. ಕಾಂಡದಲ್ಲಿ ರಂಧ್ರಗಳಾಗುತ್ತವೆ ಹಾಗೂ ತೊಗಟೆಯ ಒಳಭಾಗದಲ್ಲಿ ಜೇನು ಗೂಡಿನಂತಹ ಚಿತ್ತಾರ ಕಂಡು ಬಂದು ಗಿಡಗಳು ಒಮ್ಮೆಲೇ ಒಣಗಿ ಸಾಯುತ್ತವೆ.
ನಿರ್ವಹಣೆ : ತೀವ್ರ ಬಾಧೆಗೊಳಗಾದ ಗಿಡಗಳನ್ನು ನಾಶಪಡಿಸಬೇಕು. ರೋಗದ ಹತೋಟಿಗಾಗಿ ಮೊದಲೇ ಅವಶ್ಯ ವೈರಸ್ಗಳಿಂದ ನಿರೋಧಕ ಚುಚ್ಚುಮದ್ದು ಹಾಕಿದ ಸಸಿಗಳನ್ನೇ ನಾಟಿಗಾಗಿ ಉಪಯೊಗಿಸಬೇಕು.
ಬೂದು ರೋಗ : ಎಲೆ ಹಾಗೂ ಎಳೆಯ ಟೊಂಗೆಗಳ ಮೇಲೆ ಬೂದು ತರಹದ ಶಿಲೀಂಧ್ರ ಬೆಳವಣಿಗೆ ಕಂಡುಬಂದು ಎಲೆಗಳು ಅಪಕ್ವವಾಗಿ ಉದುರುತ್ತವೆ.
ನಿರ್ವಹಣೆ : ೩ ಗ್ರಾಂ. ನೀರಿನಲ್ಲಿ ಕರುವ ಗಂಧಕ ಶೇ. ೫೦ ಅಥವಾ ೧ ಗ್ರಾಂ. ಕಾರ್ಬೆನ್ಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಅವಶ್ಯವಿದ್ದಲ್ಲಿ ಸಿಂಪರಣೆಯನ್ನು ಪುನಃ ಮಾಡಬೇಕು.
ಕಳೆ ನಿರ್ವಹಣೆ : ಲಿಂಬೆ ಸಸಿ ಇರುವಾಗ ಜಾಗರೂಕತೆಯಲ್ಲಿ ಡೈಯುರಾನ್ ಕಳೆನಾಶಕ ಸಿಂಪಡಿಸಿರಿ. ಲಿಂಬೆ ಸಸ್ಯವನ್ನು ಹಿತ ಮಿತವಾಗಿ ಪ್ರೂನಿಂಗ್ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬಹುದು. ಹೊಸ ಚಿಗುರುಗಳಲ್ಲಿ ಹೂವು, ಹೆಚ್ಚು ಬಂದು ಕಾಯಿ ಪುಷ್ಟಿಯಾಗಿರುತ್ತದೆ.
ಕೊಯ್ಲು ಮತ್ತು ಇಳುವರಿ
ಲಿಂಬೆ ಸಸಿಗಳು ನಾಟಿ ಮಾಡಿದ ೨ನೇ ವರ್ಷದಿಂದ ಇಳುವರಿ ಪ್ರಾರಂಭವಾಗುತ್ತದೆ. ಲಿಂಬೆ ಹಣ್ಣುಗಳು ಹೂಬಿಟ್ಟ ೬ ತಿಂಗಳ ನಂತರ ಕೊಯ್ಲಿಗೆ ಬರುತ್ತವೆ. ವರ್ಷದಲ್ಲಿ ೨ ಬಾರಿ ಅಂದರೆ ಜುಲೈ-ಸಪ್ಟೆಂಬರ್ ಮತ್ತು ಮಾರ್ಚ್-ಜೂನ್ ತಿಂಗಳುಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಸುಮಾರು ೮ ವರ್ಷದ ಲಿಂಬೆ ಗಿಡದಿಂದ ೧೦೦೦-೧೨೦೦ ಹಣ್ಣುಗಳನ್ನು (೨೫ ಟನ್ ಪ್ರತಿ ಹೆಕ್ಟೇರಿಗೆ) ಮತ್ತು ಇಟಾಲಿಯನ್ ಮತ್ತು ಇತರ ಗಜನಿಂಬೆಯಿಂದ ೬೦೦-೮೦೦ ನಿಂಬೆಗಳನ್ನು ಪ್ರತಿ ಗಿಡದಿಂದ ಪ್ರತಿ ವರ್ಷ ನಿರೀಕ್ಷಿಸಬಹುದು.
ಇಟಾಲಿಯನ್ ಲಿಂಬೆ, ಗಜಲಿಂಬೆ ಮುಂತಾದವುಗಳನ್ನು ರಸ ತೆಗೆಯುವವರಿಗೂ, ಉಪ್ಪಿನ ಕಾಯಿ ತಯಾರಕರಿಗೂ ಔಷಧಿ ತಯಾರಕರಿಗೂ ಮಾರಾಟ ಮಾಡಬೇಕು. ಇದರಲ್ಲಿ ರಸ ಉತ್ತಮವಾಗಿ ಇರುತ್ತದೆಯಾದರೂ ರಸ ನಿಂಬೆಯಂತೆ ಅದನ್ನು ಕೈಯಲ್ಲಿ ಹಿಂಡಿ ತೆಗೆಯಲು ಕಷ್ಟವಾಗುತ್ತದೆ. ಇದರ ರಸ ತೆಗೆಯುವ ಸಾಧನಗಳಿದ್ದು, ಅದರಲ್ಲಿ ಗರಿಷ್ಟ ರಸ ತೆಗೆಯಲಿಕ್ಕಾಗುತ್ತದೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಏಪ್ರಿಲ್ ೨೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬