ಸ್ಟೇಟಸ್ ಕತೆಗಳು (ಭಾಗ ೧೦೬೩)- ಫಲ
ಬರಹಗಾರರ ಬಳಗ
ಆಗಸ್ಟ್ ೨೯, ೨೦೨೪
೧೨ ವೀಕ್ಷಣೆಗಳು
ದಿನವು ನನ್ನ ಹುಡುಕಿತ್ತೋ ಅಥವಾ ದಿನವನ್ನ ನಾನು ಅರಸಿದೆನೋ ಗೊತ್ತಿಲ್ಲ. ಒಟ್ಟಿನಲ್ಲಿ ದಿನವೊಂದು ಎದುರಿಗೆ ಬಂದು ನಿಂತಿತ್ತು. ಕನಸು ಕಂಡ ಕಣ್ಣಗಳು ಇಂದು ನನಸಾಗಿ ಕಣ್ಣೆದುರು ನಿಂತು ಹಿರಿಯರ ಸಮ್ಮುಖದಲ್ಲಿ ಅಕ್ಷತೆಗಳ ಮೂಲಕ ಆಶೀರ್ವಾದ ಪಡೆದು ಬಾಳ ದೋಣಿಯಲ್ಲಿ ಜೊತೆಯಾಗಿ ಬಾಳುವ ಅದ್ಭುತ ಘಳಿಗೆಯಲ್ಲಿ ನಾನಿಂದು ನಿಂತಿದ್ದೇನೆ. ಈ ಕ್ಷಣದಲ್ಲಿ ನನ್ನವಳ ಮೊಗದಲ್ಲಿ ಮಂದಸ್ಮಿತದ ನಗುವಿನೊಂದಿಗೆ ನಿಡಿದಾದ ಉಸಿರು ಚೆಲ್ಲಿ ಸಪ್ತಪದಿ ಹೆಜ್ಜೆ ತುಳಿಯುವ ಮಧುರ ಘಳಿಗೆಗೆ ಕಾಯುತ್ತಿದ್ದೇನೆ. ಎಲ್ಲರೂ ಹರಸುತ್ತಾರೆ, ಆಶೀರ್ವಾದ ನೀಡುತ್ತಾರೆ, ಯಾಕೆಂದರೆ ನಾನು ಕಾದಿದ್ದೇನೆ. ಒಪ್ಪಿಗೆ ಪಡೆದಿದ್ದೇನೆ. ಹಾಗಾಗಿ ಅರಿತುಕೊಂಡಿದ್ದೇನೆ. ನಮ್ಮ ಕ್ಷಣ ದಿನಕ್ಕಾಗಿ ಕಾಯಬೇಕು, ತಾಳ್ಮೆ ಬೇಕು. ಮನಸ್ಸಿನಲ್ಲಿ ಅನುದಿನವು ಅಂದುಕೊಂಡರೆ ಖಂಡಿತಾ ಒಳ್ಳೆಯದೇ ಆಗುತ್ತದೆ. ನೀವು ಇದನ್ನೇ ಪಾಲಿಸಬಹುದು. ಯಾಕೆಂದರೆ ನನಗೆ ಫಲ ಸಿಕ್ಕಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಆಗಸ್ಟ್ ೨೯, ೨೦೨೪
|
ನವೀಕರಿಸಿದ: ಏಪ್ರಿಲ್ ೨೧, ೨೦೨೬