ಸ್ಟೇಟಸ್ ಕತೆಗಳು (ಭಾಗ ೧೦೮೮)- ಮೂರ್ತಿ
ಬರಹಗಾರರ ಬಳಗ
ಸೆಪ್ಟೆಂಬರ್ ೨೩, ೨೦೨೪
೬ ವೀಕ್ಷಣೆಗಳು
ಮಣ್ಣಿನ ಮೂರ್ತಿಯೊಂದು ತಯಾರಾಗಿತ್ತು. ಅದಕ್ಕೆ ಜೀವ ನೀಡಬೇಕಾಗಿತ್ತು. ಹಾಗಾಗಿ ಎಲ್ಲರೂ ಸೇರಿ ಅದಕ್ಕೆ ಜೀವವನ್ನು ನೀಡಿ, ಲಿಂಗವನ್ನು ನಿರ್ಧಾರ ಮಾಡಿದರು. ಅದಾದ ನಂತರ ಆ ಮೂರ್ತಿಗೆ ಹೇಗೆ ಬದುಕಬೇಕು ಅನ್ನೋದು ಗೊತ್ತಿರ್ಲಿಲ್ಲ. ಸುತ್ತಮುತ್ತ ನೋಡಿ ತಿಳಿಬೇಕಿತ್ತು. ಜಾತಿಯ ಹಣೆಪಟ್ಟಿ ಏರಿತು, ಧರ್ಮದ ಅಫೀಮು ತುಂಬಿಸಲಾಯಿತು. ಯಾರ ಮೇಲೆ ದ್ವೇಷ ಕಾರಬೇಕು ಯಾರನ್ನ ಪ್ರೀತಿಸಬೇಕು, ಎಲ್ಲಿ ಅಸೂಯೆ ಹೆಚ್ಚಾಗಬೇಕು, ಎಲ್ಲವನ್ನು ಅದರೊಳಗೆ ತುಂಬಿ ಹೊರಗಿನಿಂದ ಕಾಣದ ಹಾಗೆ ಒಳಗಿನಿಂದಲೇ ಎಲ್ಲ ಬದಲಾವಣೆಗಳನ್ನು ಸುತ್ತ ಸೇರಿದವರು ಮಾಡುವುದಕ್ಕ ಆರಂಭ ಮಾಡಿದರು. ಆ ಮೂರ್ತಿಗೆ ಇದ್ಯಾವುದೋ ಅರಿವಾಗಲೇ ಇಲ್ಲ. ತನ್ನ ಮೂಲ ರೂಪ ಬದಲಾಗಿದೆ ಅನ್ನುವುದು ಆ ಮೂರ್ತಿಗೆ ಅರಿವಾಗಲೇ ಇಲ್ಲ. ಒಂದು ದಿನ ಅದು ಒಡೆದೇ ಹೋಯ್ತು. ಆ ಮೂರ್ತಿಯನ್ನು ಸೃಷ್ಟಿಸಿದವರಿಗೆ ಮಾತ್ರ ಅದರ ನೋವು ಕಾಡಿತ್ತೇ ವಿನಃ ಇನ್ಯಾರಿಗೂ ಅಲ್ಲ. ಅವರು ಆ ಭಾವನೆಗಳನ್ನು ಹಾಗೆ ಒತ್ತಿ ಹಿಡಿದುಕೊಂಡು ಇನ್ನೊಂದು ಮಣ್ಣಿನ ಮೂರ್ತಿಯನ್ನು ಹುಡುಕುತ್ತಾ ಹೊರಟರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೩, ೨೦೨೪
|
ನವೀಕರಿಸಿದ: ಏಪ್ರಿಲ್ ೨೧, ೨೦೨೬