ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೩
ಕೆ.ಪಿ.ಅಶ್ವಿನ್ ರಾವ್
ಸೆಪ್ಟೆಂಬರ್ ೧೭, ೨೦೨೫
೧೧ ವೀಕ್ಷಣೆಗಳು
ಬೇಕು - ಬೇಡ
ಬೇಕು - ಬೇಡಗಳ ತುಮುಲದಲ್ಲಿ
ಬಡವಾಗಿ ಹೋಯ್ತು ಬದುಕು
ಸಾಕು - ಬೇಕುಗಳ ಚಿಂತೆಯಲ್ಲಿ
ಕೃಶವಾಗಿ ಹೋಯ್ತು ಬದುಕು !
ತೃಪ್ತಿಯನ್ನು ಬಯಸುತ್ತ ವಸ್ತುಗಳ
ಪಡೆವ ಚಿಂತೆ ಹೆಚ್ಚಿ
ಕ್ಷಿಪ್ರ ಬಯಕೆಗಳ ಹಿಂಡ ಹೊತ್ತ ಮನ-
ದತ್ತ ಚಿತ್ತ ನೆಚ್ಚಿ !
ಬಯಕೆಗಳನು ಬೆಂಬತ್ತಿ ಸಾಗಿದರೆ
ಪಡೆಯಲಹುದೆ ಅದರ?
ಬಯಸಿದಷ್ಟು ಲಭಿಸಿದರು ಮತ್ತೆ
ತಲೆದೋರಿಕೊಳುವ ಹದರ !
ತೃಪ್ತಿಯೆಂಬ ವಸ್ತುವನು ಪಡೆವ ಬಗೆ-
ಗೊತ್ತು ನೀಡಿ ಇತ್ತ
ಕ್ಲಪ್ತ ಸಮಯದಲಿ ಲಿಪ್ತವಾಗಿಸುವ -
ದತ್ತ ಇತ್ತ ಸುತ್ತ !
ಬೇಕು - ಬೇಡಗಳ ತುಮುಲದಲ್ಲಿ ಬಸ-
ವಳಿದ ನಮಗೆ ಈಗ
ಸಾಕು - ಸಾಕು ಎನುವಂಥ ಭಾವಗಳ
ಹೊಳಹು ಸಿಗಲಿ ಬೇಗ !
***
ಸಖ್ಯ
ಸಖ್ಯವನು ಗಳಿಸಿಕೊಳ್ಳುವ ಪ್ರಮುಖ ಗುರಿಯಿರಲು
ಮುಖ್ಯವಾದುದು ತಾನೆ ಸತ್ಯನಿಷ್ಟೆ
ಲಭ್ಯವನು ಯೋಚಿಸುತಲಭ್ಯವಾದುದ ಬಯಸೆ
ಸಭ್ಯತನಕಿನ್ನಷ್ಟು ಮೆರಗು ಅಷ್ಟೆ!
ಸ್ನೇಹದೊಲುಮೆಯ ಕೊಡುಗೆಗಿನ್ನಷ್ಟು ಬಲ ಬರಲು
ಶುದ್ಧ ಭಾವದ ನಿಖರ ನಿಲುವು ಸಾಕು
ಸರಲತೆಯ ವಿರಲತೆಯ ಭವ್ಯ ಸಾಕಾರಕ್ಕೆ
ಬದ್ಧವಾಗಿರುವಂಥ ಛಲವು ಬೇಕು !
ಅನ್ಯ ಗೊಡವೆಯ ತ್ಯಜಿಸಿ ತನ್ನತನದನುಭಾವ -
ವನ್ನು ಮೆಚ್ಚುವ ಸ್ಪಷ್ಟ ಒಲವು ಇರಲಿ
ತನ್ನ ನಿಲುವಿಗೆ ಆತು ಭಿನ್ನ ನಿಲುವಿಗೆ ಸೋತು
ಹೋಗದಿಹ ಧೃಢವಾದಬಲವು ಬರಲಿ !
ಸಖ್ಯದಲಿ ಸುಖ ಕಂಡು ಸುಖದ ಸೌಖ್ಯವನುಂಡು
ಮಿಕ್ಕುದನು ಗೌಣವಾಗಿಸುವ ಭಾವ
ದಕ್ಕದುದನೆಲ್ಲವನು ಲೆಕ್ಕಕ್ಕೆ ತಾರದಲೆ
ಸಿಕ್ಕುದುದರಲಿ ಸುಖವ ಕಾಂಬ ಜೀವ !
***
ಪ್ರಕಟಿಸಿದ: ಸೆಪ್ಟೆಂಬರ್ ೧೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬