ಕನಸುಗಳು ಇನ್ನೂ ಕಣ್ಣಿನೊಳಗೆ ಮಿನುಗುತ್ತಿದೆ. ಕ್ಷಣ ದಾಟುತ್ತಾ ಹೋದ ಹಾಗೆ ಕಣ್ಣು ಕೆಂಪಾಗುತ್ತಿದೆ. ಕನಸುಗಳೆಲ್ಲವೂ ರೆಪ್ಪೆ ಮುಚ್ಚಿಕೊಳ್ಳುತ್ತಿವೆ. ಬದುಕಿನ ಆಸೆಗಳೆಲ್ಲವೂ ಅಲ್ಲಿ ಮಣ್ಣಾಗುವ ಲಕ್ಷಣ ಕಾಣುತ್ತಿದೆ. ಅವನು ಮಾಡಿದ್ದು ದೊಡ್ಡ ತಪ್ಪೇನಲ್ಲ? ಮನೆಯಿಂದ ಹೊರಟಾಗ ಹೆಲ್ಮೆಟ್ ತಲೆಗೆ ಹಾಕಿಕೊಂಡಿರಲಿಲ್ಲ, ಬೈಕಿನ ವೇಗಕ್ಕೆ ನಿಯಂತ್ರಣವಿರಲಿಲ್ಲ, ನೋಡುಗರನ್ನು ರಂಜಿಸುವ ಉದ್ದೇಶದಿಂದ ಒಂದಷ್ಟು ಓಲಾಟ ಹೋರಾಟಗಳ ನಡುವೆ ಬೈಕು ಅಪ್ಪಳಿಸಿತ್ತು. ದೇಹ ನೆಲವನ್ನ ಚುಂಬಿಸಿತ್ತು. ಬದುಕಬೇಕೆಂದುಕೊಳ್ಳುವಷ್ಟರಲ್ಲಿ ಉಸಿರು ಹೊರಟುಹೋಗಿತ್ತು. ತಲೆಯಿಂದ ರಕ್ತ ಕಣ್ಣೊಳಗೆ ಇಳಿದು ರಸ್ತೆಯಲ್ಲಿ ಸೋರಿಕೆಯಾಗುತ್ತಿತ್ತು. ಎಂದಿನಂತೆ ಜನ ಸೇರಿದ್ದರು. ವಿಷಯಗಳು ಊರಲ್ಲೆಲ್ಲಾ ಪ್ರಚಾರ ಪಡೆದುಕೊಂಡವು, ಆಂಬುಲೆನ್ಸ್ ದೇಹವನ್ನು ಎತ್ತಿ ಶವಗಾರದ ಕಡೆಗೆ ಹೊರಟಿತು. ಅವನ ಭಾವಚಿತ್ರದ ಒಂದಷ್ಟು ಬ್ಯಾನರ್ ಗಳು ಊರಿನಲ್ಲಿ ಕಂಡು ಬಂದವು. ಮನೆ ಮೌನವಾಯಿತು ಜನ ಒಂದು ಕ್ಷಣ ಮಾತಾಡಿ ಮರೆತುಬಿಟ್ಟರು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ