'ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ' ಮತ್ತು 'ಸಾಗಲಿ ಗುರಿ ಸೇರಲಿ' ಎಂಬ ಕನ್ನಡ ಚಿತ್ರಗೀತೆಗಳನ್ನು ನೀವು ಕೇಳಿಯೇ ಇರುತ್ತೀರಿ. 'ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?' ಮತ್ತು 'ಮೆರೆದವರೆಲ್ಲಾ ಅಳಿದಿಹರೆಂಬ ಸತ್ಯವ ನೀನು ಮರೆಯದಿರು' ಎಂಬ ಸಾಲುಗಳು ಈ ಹಾಡುಗಳಲ್ಲಿ ಅನುಕ್ರಮವಾಗಿ ಬರುತ್ತವೆ ಎಂಬುದೂ ನಿಮಗೆ ಗೊತ್ತು. ಅದ್ಯಾಕೋ ಏನೋ ಗೊತ್ತಿಲ್ಲ. 'ಜೂನಿಯರ್ ಜಯಲಿಲತಾ' ಎಂದೇ ಕೆಲವೊಮ್ಮೆ ಕರೆಯಲ್ಪಡುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಮಾತು-ವರ್ತನೆ-ಠೇಂಕಾರಗಳನ್ನು ಕಂಡಾಗಲೆಲ್ಲಾ ಈ ಸಾಲುಗಳು ಅಪ್ರಯತ್ನವಾಗಿ ನೆನಪಾಗುವುದುಂಟು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದಾತ್ತ ಉದ್ದೇಶವಿಟ್ಟುಕೊಂಡು ರಾಜ್ಯಕ್ಕೆ ಬಂದು ಪಾಲ್ಗೊಂಡಿದ್ದ, ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಮತಾ ಅವರು ಹಾಜರಾಗದೆ ತನ್ಮೂಲಕ ಶಿಷ್ಟಾಚಾರವನ್ನು ಮುರಿದಿರುವುದು ಇದಕ್ಕೆ ಕಾರಣ. ಸದರಿ ಕಾರ್ಯಕ್ರಮಕ್ಕೆ ಸರಿಯಾದ ಜಾಗವನ್ನಾಗಲೀ, ಅಗತ್ಯ ಮೂಲಸೌಕರ್ಯವನ್ನಾಗಲೀ ಕಲ್ಪಿಸದೆ ಅವಮಾನಿಸಿದ ಮಮತಾರ ವರ್ತನೆಗೆ ಕೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು, 'ಕೆಲವರಿಗೆ ಅಧಿಕಾರದ ಅಹಂಕಾರ ನೆತ್ತಿಗೇರಿರುತ್ತದೆ; ಇದು ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖ್ಯಸ್ಥರ ಕೊಳಕು ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ' ಎಂದು ಗುಡುಗಿರುವುದು ಸರಿಯಾಗೇ ಇದೆ. ರಾಜಕಾರಣ ಎಂದಾಕ್ಷಣ ಪರ ಮತ್ತು ವಿರೋಧದ ಅಭಿಪ್ರಾಯಗಳು ಸಹಜ. ಆದರೆ ಅದನ್ನು ಕೂಡ 'ಯಥೋಚಿತವಾಗಿ ವ್ಯಕ್ತಪಡಿಸಬೇಕೇ ಹೊರತು, ತಮ್ಮ ಹುದ್ದೆಯ ಘನತೆಯನ್ನು ಮರೆತು ಕೀಳುಮಟ್ಟಕ್ಕೆ ಇಳಿಯಬಾರದು. ಆದರಿಲ್ಲಿ ಮಮತಾ ಬ್ಯಾನರ್ಜಿಯವರು ಆಯ್ದುಕೊಂಡಿರುವುದು 'ಎರಡನೇ' ಆಯ್ಕೆಯನ್ನು, ಮಮತಾರ ಈ ವರ್ತನೆಗೆ ಅವರ ಪಕ್ಷದ ವತಿಯಿಂದ 'ತೇಪೆ ಹಚ್ಚುವಂಥ" ಸಮರ್ಥನೆ ಹೊಮ್ಮಿದೆಯಾದರೂ ಅದು ಸ್ವೀಕಾರಾರ್ಹವಲ್ಲ. ಒಟ್ಟಿನಲ್ಲಿ, 'ವಯಸ್ಸಾಗುತ್ತಾ ಹೋದಂತೆ ವ್ಯಕ್ತಿಯನ್ನು ಪ್ರಬುದ್ಧತೆ ಆವರಿಸುತ್ತದೆ' ಎಂಬ ಮಾತು ಕೆಲವೊಮ್ಮೆ ಸುಳ್ಳಾಗುತ್ತದೆ ಎಂಬುದಕ್ಕೆ ನಮ್ಮ ರಾಜಕಾರಣದಲ್ಲಿ ಆಗಾಗ ಇಂಥ ಪುರಾವೆ ಸಿಗೋದಂತೂ ಖರೇ! ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೦-೦೩-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ