ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೪, ೨೦೨೬
೫ ವೀಕ್ಷಣೆಗಳು
ಬಯಲು ಸೀಮೆ ಜಿಲ್ಲೆಗಳ ಆಶಾಕಿರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಹಲವು ಹೋರಾಟದ ಬಳಿಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೀಗ ಈ ತಾತ್ವಿಕ ಒಪ್ಪಿಗೆ, ಶಾಶ್ವತ ಒಪ್ಪಿಗೆಯಾಗುವಂತೆ ಮಾಡುವಲ್ಲಿ, ಹೊಸ ಕಾನೂನು ತೊಡಲು ಉಂಟಾಗದಂತೆ ತಡೆಯುವಲ್ಲಿ ರಾಜ್ಯ ಸರಕಾರದ ಪಾತ್ರ ಮಹತ್ವದಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಎತ್ತಿನಹೊಳೆ ಎನ್ನುವ ತೊರೆಯ ನೀರನ್ನು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ಹರಿಸಬೇಕೆಂಬ ಆಲೋಚನೆ 'ಮೊಳಕೆ' ಒಡೆದ ದಿನದಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಅದರಲ್ಲಿಯೂ ಸಣ್ಣ ತೊರೆಯಾಗಿ ಹರಿಯುವ ನದಿಯಿಂದ ಈ ಪ್ರಮಾಣದ ನೀರನ್ನು ಹರಿಸುವ ಹರಸಾಹಸಕ್ಕಾಗಿ ಪಶ್ಚಿಮಘಟ್ಟದ ಸಹಸ್ರಾರು ಮರಗಳಿಗೆ ಕೊಡಲಿ ಪೆಟ್ಟು ಹಾಕುವ ಅಗತ್ಯವಿದೆಯೇ ಎನ್ನುವ ಪರಿಸರವಾದಿಗಳ ತೀವ್ರ ವಿರೋಧದ ಹೊರತಾಗಿಯೂ, ರಾಜ್ಯ ಸರಕಾರ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ೨೦೧೨ರಲ್ಲಿ ೧೨ ಸಾವಿರ ಕೋಟಿ ರು. ವೆಚ್ಚದಲ್ಲಿ ಶುರುವಾದ ಯೋಜನೆ ಸದ್ಯ ೨೩ ಸಾವಿರ ಕೋಟಿ ರು.ಗೆ ಬಂದು ಕೂತಿದೆ. ಈ ನಡುವೆ ಹಾಸನ-ತುಮಕೂರು ನಡುವೆ ಬರುವ ೨೭೭ ಎಕರೆ ಅರಣ್ಯವನ್ನು ಬಳಸಿಕೊಳ್ಳಲು ಕೇಂದ್ರ ಅರಣ್ಯ ಇಲಾಖೆಯಿಂದ ಅನುಮತಿ ಸಿಗದೇ, ಕಾಮಗಾರಿ ಮುಂದೆ ಸಾಗುತ್ತಿರಲಿಲ್ಲ. ಆದರೀಗ ಬರೋಬ್ಬರಿ ೩೪ ಷರತ್ತುಗಳನ್ನು ವಿಧಿಸಿ ಯೋಜನೆ ಮುಂದುವರೆಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಈ ಹಿಂದೆ ಅನುಮತಿ ಇಲ್ಲದೇ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕಾಮಗಾರಿ ನಡೆಸಿದ ಸ್ಥಳದ ಮೌಲ್ಯದ ಆರು ಪಟ್ಟು ಮೌಲ್ಯವನ್ನು ದಂಡದ ರೂಪದಲ್ಲಿ ಪಾವತಿಸಬೇಕು ಎನ್ನುವ ಕಠಿಣ ಷರತ್ತುಗಳನ್ನು ಕೇಂದ್ರ ಅರಣ್ಯ ಇಲಾಖೆ ವಿಧಿಸಿದೆ. ಆದರೆ ಈ ಷರತ್ತುಗಳನ್ನು ಪಾಲಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಈಗಲೂ ಸರಕಾರದ ಬಳಿಕ ಉತ್ತರವಿಲ್ಲ. ಇದರೊಂದಿಗೆ ಅರಣ್ಯ ಭೂಮಿಯ ಪ್ರಮಾಣಕ್ಕೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಗಿಡಗಳನ್ನು ಬೆಳೆಸಬೇಕು. ಇಷ್ಟೆಲ್ಲ ಕಠಿಣ ಷರತ್ತುಗಳನ್ನು ವಿಧಿಸಿರುವ ಕೇಂದ್ರ ಅರಣ್ಯ ಇಲಾಖೆ, ಈ ಷರತ್ತುಗಳಲ್ಲಿ ಯಾವ ಷರತ್ತು ಉಲ್ಲಂಘನೆಯಾದರೂ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಮೊದಲೇ ನೀಡಿದೆ. ಈ ಷರತ್ತಿನಲ್ಲಿ ಯಾವುದೇ ಷರತ್ತು ಉಲ್ಲಂಘನೆಯಾದರೂ, ತಾತ್ವಿಕ ಅನುಮೋದನೆ ರದ್ದಾಗುವ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಭೀಮಾರಿ ಹಾಕಿಸಿಕೊಳ್ಳುವ ಆತಂಕವಿರುವುದಂತೂ ಸುಳ್ಳಲ್ಲ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೪-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಏಪ್ರಿಲ್ ೦೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬