ಹಿರಿಯ ಪತ್ರಕರ್ತ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಕೃತಿ ಸಾವು. ಕೃತಿಯಲ್ಲಿ ಲೇಖಕರು ಹೇಳಿರುವಂತೆ, ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ಅದು ನಾವು ಕೊಟ್ಟ ಕೊನೆಯ ಅಪಾಯಿಂಟ್‌ಮೆಂಟ್. ಏನೇ ಮಾಡಿದರೂ ಅದು ರದ್ದಾಗದೇ ಇರುವ ಮುಖಾಮುಖಿ. ಕೊನೆಗೂ ಉಳಿಯುವ ಗೆಳೆಯ, ಬಂದೇ ಬರುವ ಅತಿಥಿ, ಕರೆದುಕೊಂಡೇ ಹೋಗುವ ಸಾಲಗಾರ, ತಪ್ಪಿಸಿಕೊಳ್ಳಲಿಕ್ಕೆ ಅವಕಾಶ ಕೊಡದ ಚಾಣಾಕ್ಷ ಪತ್ತೇದಾರ, ಎಲ್ಲ ನೋವನ್ನೂ ಕೊನೆಗಾಣಿಸುವ ವೈದ್ಯ, ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು- ಸಾವು. ಗರುಡ ಪುರಾಣ, ಉಪನಿಷತ್ತು, ಪುರಾಣದ ಕತೆಗಳೆಲ್ಲ ಸಾವಿನ ಚಿಂತನೆ ನಡೆಸಿವೆ. ಸಾವಿನ ನಂತರ ಏನು, ಪುನರ್ಜನ್ಮ ಇದೆಯೇ ಎಂದು ಹುಡುಕಾಡಿವೆ. ಕವಿಗಳೂ, ಕತೆಗಾರರೂ, ಚಿಂತಕರೂ, ಅಧ್ಯಾತ್ಮ ಬಲ್ಲವರೂ ಸಾವಿನ ಬೆನ್ನಟ್ಟಿ ಹೋಗಿದ್ದಾರೆ. ನಶ್ವರವಾದ ಬದುಕು, ಅಮರತ್ವದ ಆಶೆ ಮತ್ತು ಸಾವಿನ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಈ ಪುಸ್ತಕದಲ್ಲಿ ಸಾವನ್ನು ಎಲ್ಲಾ ಮಗ್ಗಲುಗಳಿಂದ ಸ್ಪರ್ಶಿಸಲಾಗಿದೆ. ಬದುಕುತ್ತಿದ್ದೇನೆ ಅಂದರೆ ಸಾಯುತ್ತಿದ್ದೇನೆ ಅಂತಲೇ ಅರ್ಥ. ಒಂದು ದಿನ ಬದುಕಿದರೆ, ನಮ್ಮ ಬದುಕಿನಿಂದ ಒಂದು ದಿನ ಕಳೆದುಹೋದ ಹಾಗೆ. ಎಲ್ಲ ದಿನಗಳೂ ಮುಗಿದ ನಂತರ ಆ ದಿನ ಬರುತ್ತದೆ. ಹಕ್ಕಿ ಹಾರಿಹೋಗುತ್ತದೆ. ಗಿಣಿಯು ಪಂಜರದೊಳಿಲ್ಲ ಅನ್ನುವುದು ಗೊತ್ತಾಗುತ್ತದೆ. ಆದರೆ ಆ ಗಿಣಿ ಮತ್ತೊಂದು ಪಂಜರವನ್ನು ಹುಡುಕಿಕೊಂಡು ಹೊರಡುತ್ತದೆಯೋ ಸ್ವಚ್ಛಂದವಾಗಿ ಹಾರಾಡುತ್ತಲೇ ಇರಲಿಕ್ಕೆ ಬಯಸುತ್ತದೆಯೋ ಗೊತ್ತಿಲ್ಲ. ಹುಟ್ಟಿನ ಜತೆಗೇ ಹುಟ್ಟುವ ಗುಟ್ಟು ಸಾವು. ಆ ಗುಟ್ಟಿನ ಕುರಿತು ಈ ಪುಸ್ತಕ ಎಂದಿದ್ದಾರೆ. ಸುಮಾರು ೨೪೦ ಪುಟಗಳ ಈ ಪುಸ್ತಕದ ಪ್ರತಿಯೊಂದು ಹಾಳೆಗಳು ಕಪ್ಪು ಬಣ್ಣದಿಂದ ಮುದ್ರಿತವಾಗಿರುವುದು ವಿಶೇಷ.